Thursday, January 24, 2013

ನಾನೇಕೆ ಹಿಂದುವಾದೆ ? Part- I



ನಾನೇಕೆ ಹಿಂದುವಾದೆ ?   Part- I
ಡಾ|| ಕುಂವರ್ ರಫತ್ ಅಖಲಾಖ್ 
ನಾನು ನನ್ನ ಮನೆಗೆ ಮರಳಿ ಆರು ವರ್ಷಗಳು ಕಳೆದವು.  ಈಗ  ಏಳನೇ(1987) ವರ್ಷ ನಡೆಯುತ್ತಿದೆ. ಕಳೆದ   ಆರು ವರ್ಷಗಳಲ್ಲಿ  ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ  ಸೌರಾಷ್ಟ್ರದಿಂದ  ಅರುಣಾಚಲಪ್ರದೇಶದವರೆಗೆ  ನಾನು ನನ್ನ ಭಾರತವನ್ನು  ಸಮೀಪದಿಂದ ನೋಡಿದೆ,  ತಿಳಿದೆ, ಅರ್ಥಮಾಡಿಕೊಂಡೆ.  ನಮ್ಮ ದೇಶದಲ್ಲಿ  ಪ್ರಚಲಿತವಿರುವ  ಅನೇಕ ರೀತಿ ರಿವಾಜುಗಳು  ಹಾಗೂ ಆಚಾರ ವಿಚಾರಗಳ  ಪರಿಚಯವಾಯಿತು. ನಮ್ಮ ದೇಶದ ಪ್ರತಿಯೊಬ್ಬ ನಾಗರಿಕನೊಂದಿಗೆ  ಬೆರೆಯುವ  ಅವಕಾಶ  ಒದಗಿತು.  ಈ ದೇಶದ  “ಅನೇಕತೆಯಲ್ಲಿ ಏಕತೆ”ಯ  ವಾತಾವರಣವು ನನ್ನನ್ನು ರೋಮಾಂಚನಗೊಳಿಸಿತು. ಕೆಲವೆಡೆ ಉತ್ಸಾಹವನ್ನು ಶಿಥಿಲಗೊಳಿಸುವಂತಹ ಘಟನೆಗಳೂ ನಡೆದವು. ಆದರೆ ಒಂದು ವಿಶೇಷತೆ ಇದೆ ನನ್ನ ದೇಶದಲ್ಲಿ. ಅದನ್ನು ಕವಿ ಇಕ್ಬಾಲರು ಹೀಗೆ ವರ್ಣಿಸಿದ್ದಾರೆ.
ಯೂನಾನ್ ಮಿಸ್ರ್ ರೋಮನ್ ಸಬ್ ಮಿಠ್ ಗಯೇ ಜಹಾಂ ಸೇ
ಅಬ್ ತಕ್ ಮಗರ್ ಹೈ ಬಾಕಿ ನಾಮೋನಿಶಾ ಹಮಾರಾ |
ಕುಛ್  ಬಾತ್  ಹೈ  ಹಸ್ತೀ  ಮಿಠ್ತೀ  ನಹೀಂ  ಹಮಾರೀ
ಸದಿಯೋ  ರಹಾಂ  ಹೈ  ದೌರೇ    ಜಹಾಂ   ಸೇ       ||
 ಈ ಸಾಲುಗಳು ಸಮಸ್ತ ಜಗತ್ತಿಗೆ  ಓಂದು ಪ್ರೇರಣೆ. ಸುಮಾರು 2000  ಕೋಟಿ ವರ್ಷಗಳಿಂದ  ವೇದ ಸ್ಮೃತಿ, ದರ್ಶನ ಮತ್ತು  ಶಾಸ್ತ್ರಗಳ ಕಠೋರ ಹಾಗೂ  ಸರಸವಾದ  ಆಧಾರದ ಮೇಲೆ  ನನ್ನ ಭಾರತ   ಅಚಲವಾಗಿ  ದೃಢವಾಗಿ ನಿಂತಿದೆ. ಸಮಸ್ತ ಜಗತ್ತಿನ ಸ್ವರೂಪವನ್ನು  ತನ್ನಲ್ಲಿ ಸಮಾವೇಶಗೊಳಿಸಿಕೊಂಡ     ದೇಶ ಯಾವತ್ತೂ ಕೂಡಾ  ತನ್ನ ಉದಾತ್ತ ಚಿಂತನೆಗಳಲ್ಲಿ ಬದಲಾವಣೆಗಳನ್ನು  ಮಾಡಿಕೊಂಡಿಲ್ಲ.  ಈ ರಾಷ್ಟ್ರದ ಮೇಲೆ , ನಮ್ಮೀ ಸಂಸ್ಕೃತಿಯ ಮೇಲೆ  ಅದೆಷ್ಟು ಆಕ್ರಮಣಗಳಾಗಿದ್ದಾವೆಯೋ, ಅದರಿಂದಾಗಿಯೇ ಅದೆಷ್ಟು ಕಷ್ಟನಷ್ಟಗಳನ್ನನುಭವಿಸಿದ್ದೇವೆಯೋ ಅಷ್ಟು ಬೇರಿನ್ಯಾವುದೇ  ರಾಷ್ಟ್ರ   ಅನುಭವಿಸಿಲ್ಲ. ಆಕ್ರಮಣಗಳೂ ಕೂಡ  ಆಗಿಲ್ಲ.   ಅಲ್ಲೆಲ್ಲ  ಅಲ್ಲಿನ ಮೂಲಸಂಸ್ಕೃತಿಯಲ್ಲಿ  ಸಾವಿರಾರು ಬದಲಾವಣೆಗಳಾಗಿವೆ. ಭಾರತ ಮಾತ್ರ  ಅವಿಚಲವಾದ ಅಖಂಡವಾದ   ಹಿಮಾಲಯದ ಅಭಿಷೇಕ  ಮತ್ತು ಸಿಂಧುವಿನ  ನೀರರೂಪಿ ಚರಣಗಳಲ್ಲಿ ತನ್ನ ಸ್ವರೂಪದ ವರ್ಣನೆಯನ್ನು  ಅಗಣಿತ ವಿಶ್ವಪ್ರಸಿದ್ಧ ಕವಿಗಳು, ಲೇಖಕರು, ವಿದ್ವಾಂಸರು ಮೊದಲಾದವರಿಂದ ಮಾಡಿಸಿದೆ.  ಮತ್ತು ಈಗಲೂ ಸಹ  ತನ್ನ ಸಂಸ್ಕೃತಿಯ  ಪ್ರಾಚೀನತೆಯ, ಸರ್ವವ್ಯಾಪಕತ್ವದ, ಸಾರ್ವಭೌಮಿಕತೆಯ  ಮತ್ತು ಮಾನವತೆಯ ಗುಣಗಾನ ಮಾಡಿಸುತ್ತಿದೆ. ಈ ಪದ್ಧತಿಯು  ಅನಾದಿ ಕಾಲದಿಂದಲೂ ಹರಿದು ಬಂದು  ಅನಂತಕಾಲದ ತನಕ  ನಡೆಯುತ್ತಿರುತ್ತದೆ. ಇದು ಪ್ರತಿಯೊಬ್ಬ ಭಾರತೀಯನ  ಭಾವನೆಯಾಗಿದೆ. ಕೆಲವೊಮ್ಮೆ  ವೈದಿಕಸಾಮ್ರಾಜ್ಯ  ಎಂಬುದಾಗಿ  ಇನ್ಯಾವಾಗಲೋ ರಾಮರಾಜ್ಯವೆಂಬುದಾಗಿ , ಹಿಂದುಸ್ಥಾನ, ಭಾರತ,  ಇಂಡಿಯಾ ಎಂಬುದಾಗಿ , ಪುನಃ ಯಾವುದೋ ಕವಿಯ ಶಬ್ದಗಳಲ್ಲಿ
“ಯಹ್ ಚಮನ್ ಯೂಂ ಹೀ ರಹೇಗಾ  ಔರ್ ಹಜಾರೋ ಜಾನ್ವಾರ್,
ಅಪನೀ ಅಪನೀ ಬೋಲಿಯಾಂ ಸಬ್ ಬೋಲ್ಕರ್  ಉಡ್ ಜಾಯೇಂಗೇ ||   ಎಂಬುದಾಗಿ ನನ್ನ ಭಾರತ
ಹಾಡಿಸುತ್ತದೆ, ಗುಣಗಾನ ಮಾಡಿಸುತ್ತದೆ.
ಕಳೆದ 2000ಕೋಟಿ ವರ್ಷಗಳಲ್ಲಿ  ವೈದಿಕ ಸಂಸ್ಕೃತಿಯಲ್ಲಿ ಯಾವನೇ ಒಬ್ಬ ವಿದ್ವಾಂಸನಾಗಲಿ, ಕಟ್ಟರ್ ಪಂಥಿಯಾಗಲಿ, ಕೂಟನೀತಿಜ್ಞನಾಗಲಿ, ಆಕ್ರಮಣಕಾರಿಯಾಗಲಿ, ಸೇವೆಯ ಹೆಸರಿನಲ್ಲಿ ವಿಷ ಕೊಡುವವನಾಗಲಿ, ಕಟುಕನಾಗಲಿ,  ಪರಿವರ್ತನೆಯನ್ನು ಮಾಡಲು ಸಮರ್ಥನಾಗಲಿಲ್ಲ. ವೇದ  ಈಗಲೂ ಸಹ ಸಮಸ್ತ ಜಗತ್ತಿಗೆ ಸೂರ್ಯನಂತಿದೆ. ಪ್ರತಿಯೊಂದು ನವಜಾತಶಿಶುವಿಗೆ ಹೇಗೆ ತಾಯ ಮೊಲೆಹಾಲಿನ  ಅಧಿಕಾರವಿದೆಯೋ, ಹಾಗೆ ಪ್ರತಿಯೊಬ್ಬ ಮಾನವನಿಗೂ ವೇದರಾಶಿಯ ಪಠನ-ಪಾಠನ-ಶ್ರವಣಾದಿಗಳ ಮೇಲೆ ಪೂರ್ತಿ ಅಧಿಕಾರವಿದೆ. ಎಲ್ಲರನ್ನೂ ಪ್ರೀತಿಸಿ ಸಂರಕ್ಷಿಸುವ ವೇದ ತಾಯಿಯ ಹಾಗೆ.
ಜಗತ್ತಿನಲ್ಲಿ ಯಾವುದೇ ಮತ ಸಂಪ್ರದಾಯ ಅಥವಾ  ಮಜ್ಹಬ್  ತನ್ನ ಸ್ವರೂಪವನ್ನು 5000 ವರ್ಷಗಳಷ್ಟು ಕಾಲ ಜೀವಂತವಾಗಿಡಲು ಸಾಧ್ಯವಾಗಲಿಲ್ಲ.  ಇದಕ್ಕೆ ಇತಿಹಾಸವೇ ಸಾಕ್ಷಿ. ಆದರೆ ನನ್ನ  ಧರ್ಮ ಇವತ್ತಿಗೂ ಕೂಡ ಕರುಣಾಮಯ ಪುತ್ರವಾತ್ಸಲ್ಯವನ್ನು  ನಿರಂತರವಾಗಿ ಹರಿಸುತ್ತಿದೆ. ಎಲ್ಲರೊಂದಿಗೆ ಸ್ನೇಹವನ್ನು ಬಂಧುತ್ವವನ್ನು ಬೆಸೆದು ಎಲ್ಲರ ಕಲ್ಯಾಣಕ್ಕಾಗಿ ಉಪದೇಶವನ್ನು ಮಾಡುತ್ತಿದೆ. ಆದ್ದರಿಂದ ಈ ವಿಷಯದಲ್ಲಿ ನನಗೇಕೆ ಹೆಮ್ಮೆಯಿರಬಾರದು ?
ಕಳೆದ ಆರು ವರ್ಷಗಳಲ್ಲಿ  ಪತ್ರಕರ್ತರು, ಬುದ್ಧಿಜೀವಿಗಳು ಮತ್ತು ಬೇರೆ ಬೇರೆ ಜನಸಮುದಾಯದ ಸದಸ್ಯರು ನನ್ನ ಬಳಿಯಲ್ಲಿ ಮೇಲಿಂದ ಮೇಲೆ  “ನೀವು ಇಸ್ಲಾಂ ಮತವನ್ನು ತ್ಯಜಿಸಿ  ವೈದಿಕಧರ್ಮಾವಲಂಬಿಗಳಾದಿರಿ ಏಕೆ ?’’ ಎಂಬುದಾಗಿ ಪ್ರಶ್ನಿಸುತ್ತಿದ್ದರು. ಇಸ್ಲಾಂ ಗಿಂತ ಅಧಿಕ ಸಂಖ್ಯೆಯಿರುವ  ಸಂಪದ್ಭರಿತವಾದ ಕ್ರೈಸ್ತಮತವಿದೆ. ಆ ಬಳಿಕ ಕಮ್ಯುನಿಷ್ಟ್ ಪಂಥವಿದೆ. ನೀವು ಕ್ರೈಸ್ತೃರಾಗಬೇಕಿತ್ತು. ಅಥವಾ ಕಮ್ಯುನಿಷ್ಟರಾಗಬೇಕಿತ್ತು. ಆದರೆ ಜಗತ್ತಿನ    ಒಂದು ಸಣ್ಣ ಸಮೂಹವಾದ ಹಿಂದೂಧರ್ಮವನ್ನು ಆರಿಸಿದ್ದೀರಿ ಏಕೆ?”   ಹೀಗೆಲ್ಲಾ ಪ್ರಶ್ನೆ ಕೇಳಿದ್ದರಿಂದ ನನಗೆ ಅನಿಸುತ್ತಿತ್ತು- “ ಮಗು  ಒಂದು ಟಬ್ ನಲ್ಲಿ ಕುಳಿತು ಸ್ನಾನ ಮಾಡುವುದನ್ನು ಇಷ್ಟಪಡುತ್ತದೆ. ಆದರೆ ಈಜುಕೊಳ ಅಥವಾ ನದಿಯಲ್ಲಿ ಮೀಯುವುದರಿಂದ ಅದಕ್ಕೆ ಭಯವುಂಟಾಗಗುತ್ತದೆ.”  ನಾನು ಒಪ್ಪುತ್ತೇನೆ -ಜಗತ್ತಿನಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ  ಕ್ರಿಶ್ಚಿಯನ್ನರಿದ್ದಾರೆ. ಬಳಿಕ ಮುಸ್ಲಿಮರು, ಬಳಿಕ ಕಮ್ಯುನಿಷ್ಟರು. ಆದರೆ ಕುರಿಮಂದೆಯಲ್ಲಿ ಒಂದು ಸಿಂಹ ನುಗ್ಗಿದರೆ ಆಗ ಅವುಗಳಲ್ಲಿ ಅದೆಂಥಾ ಗಾಬರಿಯುಂಟಾಗುತ್ತದೆ. ಹಾಗೆಯೇ  ಅ ಕುರಿಮಂದೆ ಹೇಗೆ ಒಡೆದು ಚೂರಾಗುತ್ತದೆ ಅಂತ ಎಲ್ಲರೂ ತಿಳಿದಿದ್ದಾರೆ. ವೈದಿಕಧರ್ಮ  ಒಂದು ವಿಶಾಲ ಸಾಗರವಿದ್ದಂತೆ. ಉಳಿದವುಗಳು ಕೊಳ ಅಥವಾ ಬಾವಿಗಳಿದ್ದಂತೆ. ಕೊಳದಲ್ಲಿ ಮುಳುಗಿ ಏಳುವುದು ತುಂಬ ಸುಲಭ. ಬಾವಿಗೆ ಹಾರುವುದಾಗಲಿ ಅದರಿಂದ ಹೊರಗೆ ಬರುವುದಾಗಲಿ ಕಷ್ಟವಲ್ಲ. ಆದರೆ ಸಾಗರದಲ್ಲಿ ಮುಳುಗಿ  ಮುತ್ತನ್ನು ಹೆಕ್ಕುವುದು ಎಲ್ಲರಿಂದಲೂ ಸಾಧ್ಯವಿಲ್ಲ. ಮುಸ್ಲಿಮರಲ್ಲಿ ಕ್ರಿಶ್ಚಿಯನ್ನರಲ್ಲಿ ಅಥವಾ ಇತರ ಸಮುದಾಯಗಳಲ್ಲಿ  ಜನಸಂಖ್ಯೆ ತುಂಬಾ ಇದೆ. ಹಣವೂ ಕೂಡ ಇದೆ.  ಆದರೆ ವೈಚಾರಿಕಸ್ವಾತಂತ್ರ್ಯದ ಹೆಸರಿನಲ್ಲಿ ಯಾವ ಅನಾಚಾರ ಅತ್ಯಾಚಾರಗಳು  ಅಲ್ಲಿ ನಡೆಯುತ್ತಿವೆಯೋ  ಅದು ಎಲ್ಲರಿಗೂ ತಿಳಿದಿದೆ.  ಆದ್ದರಿಂದ ಸ್ವತಂತ್ರವಾಗಿ  ಆಕಾಶದಲ್ಲಿ  ಹಾರಾಡುವ ಹಕ್ಕಿಯಿಂದ  ಚಿನ್ನದ ಪಂಜರದಲ್ಲಿ  ಖೈದಿಯಾಗಿ  ಉಳಿಯುವ ಇಚ್ಛೆಯನ್ನು ನಿರೀಕ್ಷಿಸುವುದು ವ್ಯರ್ಥವೇ ಸರಿ. ವೈದಿಕಧರ್ಮ ಎಂಬುದು  ಮುಕ್ತ ಆಕಾಶವಿದ್ದಂತೆ. ಇಲ್ಲಿ ನಮಗೆ ಸ್ವಚ್ಛಂದವಾಗಿ ಹಾರಾಡುವ ಸ್ವಾತಂತ್ರ್ಯವಿದೆ. ನಾನು ವೈದಿಕಧರ್ಮಕ್ಕೆ ಬರಲು ಇದೇ ಕಾರಣ. ಇದೇ ನನಗೆ ಹಿತ ಎಂಬುದಾಗಿ ಅನ್ನಿಸಿತು. ಒಬ್ಬ ಮುಲ್ಲಾ ಅಥವಾ ಪಾದ್ರಿಯ ಆಜ್ಷೆಯಿಂದ  ಒಬ್ಬ ಸುಶಿಕ್ಷಿತ ನಾಗರಿಕನೂ ಕೂಡ  ಅವಮಾನಿತನಾಗುವುದನ್ನು ನೋಡಿ ನನಗೆ ದುಃಖವಾಗುತ್ತದೆ. ಇದು ಮತದ ನಿಯಮ  ಎಂಬುದಾಗಿ ನನಗೆ ಗೊತ್ತು. ಆದರೆ ದುರಾಗ್ರಹ ಮೂಢನಂಬಿಕೆ ಕ್ಷುದ್ರತನ ಯಾವುದೇ ಧರ್ಮಕ್ಕೂ ಕೂಡ  ಕೇಡನ್ನುಂಟುಮಾಡುತ್ತದೆ. ಅದೇ ಇವತ್ತು ಎಲ್ಲ ಮತ ಪಂಥ ಸಂಪ್ರದಾಯಗಳ ಸ್ಥಿತಿಯಾಗಿದೆ,
ಆದರೂ ಸಹ ಜಗತ್ತಿನಲ್ಲಿ 5000 ವರ್ಷಗಳಷ್ಟು ಹಿಂದೆ ವೈದಿಕಸಾಮ್ರಾಜ್ಯವೇ  ಇತ್ತು. ಆಗ ಕೇವಲ ಹಿಂದುಗಳು ಮಾತ್ರ  ಜಗತ್ತಿನಲ್ಲಿದ್ದರು ಎಂಬುದನ್ನು ಎಲ್ಲರೂ ತಿಳಿದಿದ್ದಾರೆ. ಆದರೆ ಯಾವುದೋ ಕಾರಣಗಳಿಂದಾಗಿ  ಅವರಿಗೆ ಹೊಸ ಮತಗಳ ಕೋಪತಾಪಕ್ಕೆ ತುತ್ತಾಗಬೇಕಾಯಿತು. ಆದ್ದರಿಂದ ನನ್ನ ಈ ಮತಾಂತರವು   ನನ್ನ ಮನೆಗೇ ನಾನು ಮರಳಿ ಬಂದಂತಾಗಿದೆ.  ನನಗೆ ನನ್ನ ಪೂರ್ವಜರು ಮಾಡಿದ  ಪಾಪದ ಪ್ರಾಯಶ್ಚಿತ್ತವನ್ನು  ಮಾಡಬೇಕಾದ ಆವಶ್ಯಕತೆಯಿದೆ.  ಒಂದು ಮಗುವಿಗೆ ಯಾವ ಪ್ರೀತಿ ಮಮತೆ  ತನ್ನ ತಾಯಿಯ ಮಡಿಲಲ್ಲಿದ್ದಾಗ ಸಿಗುತ್ತದೆಯೋ  ಆ ಪ್ರೀತಿ ಮಮತೆ,   ಹಣ ಕೊಟ್ಟರೆ ಅಥವಾ  ಮಲತಾಯಿಯಿಂದ ಸಿಗುತ್ತದೆಂದು ನೀವು ಊಹಿಸುತ್ತೀರಾ ?
(ಮುಂದುವರಿಯುವುದು)

Monday, January 21, 2013

ಮೂಲಲೇಖಕರ ಎರಡು ಮಾತು (ನಾನೇಕೆ ಹಿಂದುವಾದೆ)

ಮೂಲಲೇಖಕರ  ಎರಡು ಮಾತು
          ಇತ್ತೀಚಿನ ದಿನಗಳಲ್ಲಿ  ಧರ್ಮ  ಅರ್ಥವನ್ನು ಕಳೆದುಕೊಂಡಿದೆ. ಧರ್ಮ ಮತ್ತು ಮತ   ಎಂಬ ಶಬ್ದಗಳು ಒಂದೇ ಅರ್ಥದಲ್ಲಿ ಬಳಕೆಯಾಗುತ್ತಿರುವುದೇ ಇದಕ್ಕೆ ಕಾರಣ. ಯಾವತ್ತೂ ಕೂಡ  ಧರ್ಮ  ಅಥವಾ ಸಮಾಜ   ಇದನ್ನು ಖಂಡಿಸುವ   ಅವಶ್ಯಕತೆ ಇದೆ ಎಂಬುದನ್ನು  ತಿಳಿದುಕೊಳ್ಳಲಿಲ್ಲ.  ಯಾವತ್ತೂ ತಿಳಿದವರಾಗಲಿ,  ಬುದ್ಧಿಜೀವಿಗಳಾಗಲಿ ಇದರ ಬಗೆಗಿನ ಸ್ಪಷ್ಟೀಕರಣದ  ಅವಶ್ಯಕತೆ   ಇದೆ ಎಂಬುದಾಗಿ  ಭಾವಿಸಲಿಲ್ಲ.  ಇದರ ಮೇಲೆ ಸುದೀರ್ಘವಾದ ಚರ್ಚೆಯೇ ನಡೆಯಲಿಲ್ಲ.  ಆದ್ದರಿಂದಲೇ ಧರ್ಮವು ಭೀತಿಯನ್ನುಂಟುಮಾಡುವ ವಸ್ತುವಾಗಿ ಕಾಣತೊಡಗಿತು.(ಮತವಲ್ಲ.  ಏಕೆಂದರೆ ಅದು ಮೊದಲಿನಿಂದಲೂ ಅದನ್ನು ಅನುಸರಿಸದವರಲ್ಲಿ  ಯಾವತ್ತೂ ಭೀತಿಯನ್ನುಂಟುಮಾಡುವುದೇ ಆಗಿದೆ.)
          ಜಗತ್ತಿಗೆ  ಸೂರ್ಯ   ಒಬ್ಬನೇ. ಚಂದ್ರ, ಜಲ, ವಾಯು, ಪೃಥ್ವೀ, ಪರಮಾತ್ಮ  ಎಲ್ಲವೂ  ಒಂದೊಂದೇ. ಮತ್ತೆ ಧರ್ಮ ಹೇಗೆ ಅನೇಕವಾಗಲು ಸಾಧ್ಯ ? ಮತ, ಸಂಪ್ರದಾಯ, ಮಜ್ಹಬ್, ರಿಲಿಜನ್   ಇವೆಲ್ಲ  ಮನುಷ್ಯನ ಕಲ್ಪನೆ ಮಾತ್ರ.  ಆದರೆ ಧರ್ಮ ವ್ಯಕ್ತಿಯ ಜೀವನದ ವ್ಯಾವಹಾರಿಕತೆಯೊಂದಿಗೆ ಬೆರೆತ  ಒಂದು ಅಧ್ಯಾಯವಾಗಿದೆ. ಹೇಗೆ ಮನುಷ್ಯ ಕಣ್ಣು ಕೈಕಾಲುಗಳಿಲ್ಲದೆ ಅಪೂರ್ಣನೆನಿಸಿಕೊಳ್ಳುತ್ತಾನೋ  ಹಾಗೆ ವ್ಯಕ್ತಿ ಮತ್ತು ಸಮಾಜ ಧರ್ಮವಿಲ್ಲದಿದ್ದರೆ ಕುಂಟನಂತಾಗುತ್ತದೆ. ಇದೇ ಜಗತ್ತಿನ  ಈಗಿನ ದಯನೀಯ ಸ್ಥಿತಿಗೆ ಕಾರಣ.
          ಧರ್ಮ ಯಾವತ್ತೂ  ಪರಿವರ್ತನೆಯನ್ನು ಹೊಂದುವುದಿಲ್ಲ.   ಅದು ಅನಾದಿಕಾಲದಿಂದ ಪ್ರವಹಿಸುತ್ತಿರುವ ಎಲ್ಲರಿಗೂ ಸಮಾನವಾಗಿ ಮಾರ್ಗದರ್ಶನವನ್ನು ಮಾಡುವ  ಬುದ್ಧಿಯನ್ನು ವಿಕಸಿತಗೊಳಿಸುವ ಮಾರ್ಗವಾಗಿದೆ. ಅದರ  ಅನುಸರಣೆಯೇ  ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯವಾಗಿದೆ.
ಡಾ|| ಆನಂದ ಸುಮನ ಸಿಂಹ

ಮುನ್ನುಡಿ (ಆನಂದ ಸುಮನ ಸಿಂಹರ "ನಾನೇಕೆ ಹಿಂದುವಾದೆ" ಎಂಬ ಪುಸ್ತಕದ ನಾನು ಮಾಡಿದ ಅನುವಾದಕ್ಕೆ)

ಮುನ್ನುಡಿ
“ ಯೋನೂಚಾನಃ ಸ ನೋ ಮಹಾನ್ ”
“ ನಾನೇಕೆ ಹಿಂದುವಾದೆ’” ಎಂಬ  ಡಾ| ಆನಂದ ಸುಮನ್ ಸಿಂಹರವರ ಹಿಂದೀ ಕೃತಿಯ ಸರಳ ಹಾಗೂ ಸರಸ ಕನ್ನಡಾನುವಾದ ಮಾಡಿ ಡಾ| ಹರಿಪ್ರಸಾದರವರು  ಯೋಗ್ಯ ಕೃತಿಯನ್ನು ಹೊರತಂದಿರುತ್ತಾರೆ. ಧರ್ಮವೆಂದರೆ ಸನಾತನಧರ್ಮ.  ಅದು ಎಂದೂ ಶಾಶ್ವತವಾಗಿ ಇರುವುದರಿಂದಲೇ ಸನಾತನಧರ್ಮವೆಂದು ಹೆಸರು ಗಳಿಸಿದೆ. ಈ ಜಗತ್ತಿನಲ್ಲಿ ಅದೆಷ್ಟೋ ಮತಗಳು ಉದಯಿಸಿದ್ದರೂ ಅವುಗಳ ಮೌಲಿಕಸಾರವು ಹಿಂದೂಧರ್ಮದ್ದಾಗಿರುತ್ತದೆ. ಮತಭೇದಗಳು ಮನುಷ್ಯನನ್ನು   ಮತಾಂಧತೆಗೆ  ಒಯ್ದು ಧರ್ಮಕ್ಕೆ ಕಳಂಕವನ್ನುಂಟುಮಾಡುತ್ತವೆ. ಅದರಿಂದಾಗುವ ಅಪಚಾರಗಳು ಮತ್ತು ಹಿಂದೂಧರ್ಮದ ಹಿರಿಮೆಯನ್ನು ತಿಳಿಯಾಗಿ  ತಿಳಿಸಲು  ಪೂಜ್ಯ ದಯಾನಂದ ಸರಸ್ವತಿಯವರ  ವೇದವೇದಾರ್ಥವಿಚಾರಪರಕ ಗ್ರಂಥಗಳನ್ನು ಓದಬೇಕು. ಅದನ್ನು ಓದಿದ ಯಾವುದೇ ವಿಚಾರಕನಾಗಲಿ ಇತರ ಮತಗಳಲ್ಲಿರುವ  ನ್ಯೂನತೆಗಳನ್ನು ಕಂಡು  ಸ್ವಯಂ ಪ್ರೇರಿತನಾಗಿ  ಹಿಂದೂಧರ್ಮಾನುಯಾಯಿ ಆಗುತ್ತಾನೆಂಬುದನ್ನು ಸ್ವಜೀವನವೃತ್ತಾಂತದೊಂದಿಗೆ  ಡಾ| ಸುಮನ್ ರವರು ಚೆನ್ನಾಗಿ ತಿಳಿಸಿದ್ದಾರೆ.
ಹೆಣ್ಣು ಹೊನ್ನು ಮಣ್ಣು ಇತ್ಯಾದಿ ಪ್ರಾಪಂಚಿಕ  ಆಮಿಷಗಳನ್ನು  ಮುಂದೊಡ್ಡಿ  ಮತಾಂತರಗೊಳಿಸುತ್ತಿರುವ ಕ್ರಿಶ್ಚಿಯನ್ ಇಸ್ಲಾಮ್  ಮುಂತಾದ ಮತಗಳ  ದುರುದ್ದೇಶವನ್ನು ದೂರಗೊಳಿಸಲು ಈ ಸದ್ಗ್ರಂಥವು ಸಹಾಯಕವಾಗಿದೆ. ಜನರ  ಅಜ್ಞಾನ  ಹಾಗೂ ದೌರ್ಬಲ್ಯಗಳನ್ನು ಬಳಸಿಕೊಂಡು  ಶಾಂತಿಯ ಹೆಸರಿನ  ಅಶಾಂತಿಯನ್ನು ಹಬ್ಬುವ ಮತಗಳ  ಬಂಧನಕ್ಕೊಳಗಾಗದೆ ಸಮಸ್ತ ಜನರ ಕಲ್ಯಾಣವಾಗಲೆಂದು ಹಾರೈಸುತ್ತೇನೆ.
ಇಂತಿ
 ಪ್ರೊ. ಎ.ಪಿ.ಸಚ್ಚಿದಾನಂದ
ಕುಲಪತಿಗಳು
ರಾಷ್ಟ್ರಿಯ ಸಂಸ್ಕೃತ ಸಂಸ್ಥಾನ(ಮಾನಿತ ವಿಶ್ವವಿದ್ಯಾಲಯ)
ಜನಕಪುರೀ, ನವದೆಹಲಿ

Sunday, January 20, 2013

ನಾನೇಕೆ ಹಿಂದುವಾದೆ ?

ನಾನೇಕೆ ಹಿಂದುವಾದೆ ?
ಮೂಲ :  ಡಾ| ಆನಂದ ಸುಮನ ಸಿಂಹ (ಡಾ| ಕುಂವರ್ ರಫತ್ ಅಖ್ಲಾಖ್ )
ಅನುವಾದಕನಾದ ನನ್ನೆರಡು ಮಾತುಗಳು
.
ಸುಮಾರು ಏಳು ವರ್ಷಗಳ ಹಿಂದೆ ನಾನು ಮುಂಬಯಿಗೆ ಹೋದಾಗ ನನ್ನ ಮಿತ್ರರಾದ ದೇವದತ್ತ ಸರೋದೆಯವರು  ಒಂದು ಪುಸ್ತಕವನ್ನು ಓದಲು ಕೊಟ್ಟರು. ಕೇವಲ 30 ಪುಟಗಳ ಪುಸ್ತಕವಾದರೂ ಓದುತ್ತಿದ್ದಂತೆ ನನಗೆ ರೋಮಾಂಚನವಾಗತೊಡಗಿತು.
 ನಾನು ಓದಿದ ಇತಿಹಾಸ ನೆಹರೂ ಉದ್ದೇಶಪೂರ್ವಕವಾಗಿ ಭಾರತೀಯರನ್ನು ಭಾರತೀಯತೆಯನ್ನು ವಂಚಿಸಲು ಬರೆಸಿದ ಇತಿಹಾಸವಾಗಿತ್ತು.  ಬಳಿಕ ನಾನು ಭಾರತದ ನೈಜ ಇತಿಹಾಸವನ್ನು ಓದಲು ಆರಂಭಿಸಿದಂತೆ  ಭಾರತದ ಸೋಲಿನ ಇತಿಹಾಸ ಮಣ್ಣು ಮುಕ್ಕಿ ಗೆಲುವಿನ ಇತಿಹಾಸದ ಬೆಳಕು ನನ್ನ ಚಿಂತನೆಯ ದಿಕ್ಕನ್ನೇ ಬದಲಾಯಿಸಿತು.
 ಸ್ವಾಮಿ ಶ್ರದ್ಧಾನಂದರು ಶುದ್ಧಿಚಳವಳಿಯನ್ನು ಮಾಡಿ “ಮರಳಿ ಮಾತೃಧರ್ಮಕ್ಕೆ” ಎಂಬ ಸತ್ಕಾರ್ಯವನ್ನು ಮಾಡಿದ್ದರೂ ರಾಮನಾಮವನ್ನು ಜಪಿಸುತ್ತಿದ್ದ ಢೋಂಗಿ ಮಹಾತ್ಮನ ರಾಜಕೀಯ ದುರಾಸೆಗೆ ಬಲಿಯಾಗಬೇಕಾಯಿತು.ಆ ಬಳಿಕ 24 ವರ್ಷ  ಆತ ಮಾಡಿದ್ದೆಲ್ಲ ದೇಶದ್ರೋಹಿ ಮುಸಲ್ಮಾನರನ್ನು ಮುತ್ತಿಕ್ಕುತ್ತಲೇ . ಆ ಬಳಿಕ ಹದಿನೇಳು ವರ್ಷ  ಅಕ್ಷರಶಃ ಔರಂಗಜೇಬನ  ಅಪರಾವತಾರಿಯ ತುಘಲಕ್ ದರ್ಬಾರು. ಪಾಕಿಸ್ತಾನ ಹುಟ್ಟುವ ಮೊದಲೇ ಅಲ್ಲಿ 16 ಲಕ್ಷ ಹಿಂದುಗಳ ಮಾರಣಹೋಮವನ್ನು (  ) ಕಣ್ಣಾರೆ ಕಂಡರೂ ಅದನ್ನು ಸಹಿಸದ ನೌಖಾಲಿಯ ಹಿಂದೂಗಳ ಮೇಲೆ ಬಾಂಬು ಹಾಕುತ್ತೇನೆ ಎಂಬ ನೆಹರೂ, ಮತ್ತವನ ವಂಶಜರು ಭಾರತೀಯರಿಗೆ ಬದುಕಿನ ಭರವಸೆ ಹೇಗೆ ತಾನೇ ಕೊಡಬಲ್ಲರು ? ಇಂತಹ  ಇತಿಹಾಸದ ಹಿನ್ನಲೆಯಲ್ಲಿ ಮತಾಂತರದ ವಿಷಯದಲ್ಲಿ ಅದರಲ್ಲೂ ಇಸ್ಲಾಮ್ ನ ವಿಷಯದಲ್ಲಿ ನನ್ನನ್ನು ಬಹಳವಾಗಿ ಕಾಡುತ್ತಿದ್ದ ಪ್ರಶ್ನೆಗೆ ಈ ಪುಸ್ತಕ ನನಗೆ ಸರಿಯಾದ ಉತ್ತರವನ್ನು ಕೊಟ್ಟಿದೆ. ಪ್ರಶ್ನೆ ಏನು ಅಂತ ಕೇಳ್ತೀರಾ ?
ಶ್ರದ್ಧಾನಂದರ ಬಳಿಕ ಮುಸಲ್ಮಾನರು ಹಿಂದೂಧರ್ಮಕ್ಕೆ ಮತಾಂತರಗೊಂಡ ಒಂದೇ ಒಂದು ಉದಾಹರಣೆ ನಮ್ಮ ಇತಿಹಾಸದಲ್ಲಿ ಏಕಿಲ್ಲ ?
ಈ ಪುಸ್ತಕ ಖಂಡಿತವಾಗಿಯೂ ಹಿಂದುಗಳಿಗೆ ಮತಾಂತರದ ವಿಷಯದಲ್ಲಿ ಒಂದು ಹೊಸ ಭರವಸೆಯನ್ನು ಮೂಡಿಸುತ್ತದೆ. ಆದ್ದರಿಂದಲೇ ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಲು ಮುಂದಾದೆ. ಆಗಲೇ 2006 ಡಿಸೆಂಬರ್ ನಲ್ಲಿ ಅನುವಾದಿಸಿ  ಮೂಲಲೇಖಕರ ಅನುಮತಿಯನ್ನು ಪಡೆದು 2007 ರಲ್ಲಿ ರಾಷ್ತ್ರೋತ್ಥಾನ ಪರಿಷತ್ತಿನ ಪ್ರಕಾಶನ ವಿಭಾಗದ ಚಂದ್ರಶೇಖರರನ್ನು ಭೇಟಿಯಾಗಿ ಇದನ್ನು ಪ್ರಕಾಶಿಸಲು ವಿನಂತಿಸಿಕೊಂಡೆ. ಅವರು ಪ್ರಕಾಶನ ಸಮಿತಿಯ ಮುಂದೆ ಚರ್ಚಿಸಿ ತಿಳಿಸುವುದಾಗಿ ಹೇಳಿ 6 ತಿಂಗಳ ಬಳಿಕ ನಿರಾಕರಿಸಿ ಬಿಟ್ಟರು.   ಅವರ ರಾಜಕೀಯ ಅವರಿಗಿರಲಿ.
ಈಗ ಆರು ವರ್ಷಗಳು ಕಳೆದಿವೆ. ನನ್ನ ಸೋದರಳಿಯ  ಅಭಿಯಂತರ ರಾಜೇಶ ರಾವ್  ಇವತ್ತು ದೂರವಾಣಿಯ ಮೂಲಕ ನೆನಪಿಸಿದ್ದಾನೆ. ಹಾಗಾಗಿ  ಈಗ ಕಂಪ್ಯೂಟರ್ ನ ಮುಂದೆ ಕುಳಿತಿದ್ದೇನೆ ನಿಮಗೆ  ಆ ಪುಸ್ತಕವನ್ನು ಸಮರ್ಪಿಸುವುದಕ್ಕಾಗಿ. 
ನಾನೊಬ್ಬ ಹಿಂದು. ನನಗೆ ಧರ್ಮದಲ್ಲಿ ಶ್ರದ್ಧೆಯಿದೆ, ಆದರೆ ಮೂಢನಂಬಿಕೆಯಿಲ್ಲ. ಮತಗಳಲ್ಲಿ ಮರುಕವಿದೆ, ಆದರೆ ಆದರವಿಲ್ಲ. ಮಾನವೀಯತೆಯಲ್ಲಿ ಪ್ರೀತಿಯಿದೆ, ಆದರೆ ಕಾಪಟ್ಯವಿಲ್ಲ. ಸಮಾನತೆಯಲ್ಲಿ ಸಂತಸವಿದೆ, ಆದರೆ ಅದು ದುಃಸಾಧ್ಯವೆಂಬುದರಲ್ಲಿ ಸಂಶಯವಿಲ್ಲ. ಹಿತಶತ್ರುಗಳಲ್ಲಿ ಮರುಕವಿದೆ, ಆದರೆ ಕಪಟಸ್ನೇಹವಿಲ್ಲ.  ಆತತಾಯಿಗಳ  ಆತಂಕವಿದೆ, ಆದರೆ ಭಯವಿಲ್ಲ.
 ಇತಿಹಾಸ ನಮಗೆ ಕಲಿಸಿದ ಪಾಠವನ್ನು  ನೆನಪು ಮಾಡಿಕೊಳ್ಳುವುದು  ಭಾರತೀಯನಿಗಂತೂ ಬಹಳ ಪ್ರಮುಖ ಕರ್ತವ್ಯವೆನ್ನುವುದರಲ್ಲಿ ಸಂದೇಹವಿಲ್ಲ.  ಏಕೆಂದರೆ ನಾವು ಎದ್ದು ಹೋರಾಡಿದ್ದಕ್ಕಿಂತ  ಎಡವಿ ಬಿದ್ದಿದ್ದೇ ಹೆಚ್ಚು. ಇನ್ಯಾವತ್ತೂ ನಾವು ಎಡವಿ ಬೀಳಬಾರದು. ನಾವು ಎದ್ದು ಎದೆಯುಬ್ಬಿಸಿ  ಉಳಿದವರನ್ನೆಬ್ಬಿಸಿ ಮುನ್ನುಗ್ಗುವ ಹಂಬಲವನ್ನು  ಈ ಸಣ್ಣ ಪುಸ್ತಕ ಹುಟ್ಟುಹಾಕಬಲ್ಲದೆಂದು ನಾನು ಭಾವಿಸುತ್ತೇನೆ.  

ನಾನು  ಈ ಪುಸ್ತಕವನ್ನು ಅನುವಾದಿಸಿ ನಮ್ಮ  ವಿಶ್ವವಿದ್ಯಾಲಯದ ಕುಲಪತಿಗಳಾದ ಸನ್ಮಾನ್ಯ ಪ್ರೊ. ಸಚ್ಚಿದಾನಂದ  ಉಡುಪರನ್ನು  ಮುನ್ನುಡಿಗಾಗಿ ಕೇಳಿಕೊಂಡಾಗ ತುಂಬಾ ಸಂತೋಷದಿಂದ  ಆಶೀರ್ವದಿಸಿ ಬರೆದು ಕೊಟ್ಟು ಅನುಗ್ರಹಿಸಿದ್ದಾರೆ . ಅವರಿಗೆ ನನ್ನ ಪ್ರಣಾಮಪೂರ್ವಕ ಕೃತಜ್ಞತೆಗಳು. ಇದೇ ಸಂದರ್ಭದಲ್ಲಿ  ನಾನು ರಾಜಸ್ಥಾನ ಸಂಸ್ಕೃತ ವಿಶ್ವವಿದ್ಯಾಲಯದ  ಉಪಕುಲಪತಿಗಳಾದ ಸನ್ಮಾನ್ಯ ಪ್ರೊ.ರಾಮಾನುಜ ದೇವನಾಥನ್ ರವರಿಗೂ  ಹಾರ್ದಿಕವಾಗಿ ಕೃತಜ್ಞತೆಗಳನ್ನು ಸಲ್ಲಿಸಲು ಬಯಸುತ್ತೇನೆ. ಏಕೆಂದರೆ ಅವರು ನಾನು ಅನುವಾದಿಸಿದ ಇದೇ  ಪುಸ್ತಕದ ಸಂಸ್ಕೃತಾನುವಾದಕ್ಕೆ ಸುದೀರ್ಘವಾದ ಮುನ್ನುಡಿಯನ್ನು ಬರೆದು ಅನುಗ್ರಹಿಸಿದ್ದಾರೆ. ಆ ಪುಸ್ತಕ ಸಂಸ್ಕೃತ ಭಾರತೀ ಯಿಂದ 2009 ರಲ್ಲಿ ಪ್ರಕಾಶನಗೊಂಡಿದೆ. ನನ್ನ ಮಾತು ಇಷ್ಟೇ ಸಾಕು ಅಲ್ಲವೇ ?
ಇಂತಿ ನಿಮ್ಮವ
ಡಾ| ಹರಿಪ್ರಸಾದ. ಕೆ

 (ಮುಂದುವರಿಯುವುದು)