Thursday, October 31, 2024

“ರಾಣಿ ಲಕ್ಷ್ಮೀ ಬಾಯಿ ನನ್ನ ಕನಸಿನಲ್ಲಿ ಬಂದು ನಾನು ಈ ರೀತಿಯಲ್ಲಿ ಸೇವೆ ಸಲ್ಲಿಸಬೇಕೆಂದು ಬಯಸುತ್ತಾರೆ”

 

ರಾಣಿ ಲಕ್ಷ್ಮೀ ಬಾಯಿ ನನ್ನ ಕನಸಿನಲ್ಲಿ ಬಂದು ನಾನು ಈ ರೀತಿಯಲ್ಲಿ  ಸೇವೆ ಸಲ್ಲಿಸಬೇಕೆಂದು ಬಯಸುತ್ತಾರೆ

(ಪ್ರಣಮ್ಯಳಿಗೆ ಭಾರತ ಸರ್ಕಾರದ ರಕ್ಷಣ ಇಲಾಖೆಯ ವತಿಯಿಂದ ನಡೆಯುವ ಆನ್ ಲೈನ್ ಪ್ರಬಂಧ ಸ್ಪರ್ಧೆಗೆ ತಯಾರಿಸಿ ಕೊಟ್ಟ ಪ್ರಬಂಧ)

ಆರಂಭಿಕ ಅರಿಕೆ

 ನಮ್ಮ ದೇಶವು ಸ್ವಾತಂತ್ರ್ಯವನ್ನು ಗಳಿಸಿ ಇಂದಿಗೆ ಸುಮಾರು ಎಪ್ಪತ್ತೇಳು ವರ್ಷಗಳೇ ಕಳೆದಿವೆ. ನಾವೀಗ ಅನುಭವಿಸುತ್ತಿರುವ ಸ್ವಾತಂತ್ರ್ಯದ ಮಹತ್ವದ ಅರಿವು ನಮಗಾಗಬೇಕಾದರೆ ನಾವು ಅದಕ್ಕಾಗಿ ಹೋರಾಡಿದವರ ಅದಮ್ಯ ಸಾಹಸದ, ಶೌರ್ಯದ, ಅಸೀಮ ತ್ಯಾಗದ, ನಿರ್ವ್ಯಾಜ ಬಲಿದಾನದ ಕಥೆಗಳನ್ನು ಖಂಡಿತವಾಗಿಯೂ ತಿಳಿದುಕೊಳ್ಳಬೇಕು. ಆಗಲೇ ಗಳಿಸಿದ ಸ್ವಾತಂತ್ರ್ಯಕ್ಕೆ ಒಂದು ಅರ್ಥ ಬರುತ್ತದೆ, ಬಲಿದಾನ ಸಾರ್ಥಕವಾಗುತ್ತದೆ, ಮೆರೆದ ಶೌರ್ಯ ಸಫಲವಾದಂತಾಗುತ್ತದೆ, ಪ್ರದರ್ಶಿಸಿದ ಸಾಹಸ ಕೃತಕೃತ್ಯವೆನಿಸುತ್ತದೆ. ಜೊತೆಗೆ ನಮಗೆ ನಾಡಿನ ಮುಂದಿನ ಪ್ರಜೆಗಳಾಗಿ ಮಾಡಬೇಕಾದ ಕರ್ತವ್ಯದ ಬೋಧೆಯಾಗುತ್ತದೆ. ಸ್ವಾರ್ಥ ನೀಗುತ್ತದೆ. ಸಮೃದ್ಧಿ ಹೆಚ್ಚುತ್ತದೆ. ಶಾಂತಿ ನೆಲೆಸುತ್ತದೆ. ಸೌಹಾರ್ದತೆ ಮಿಡಿಯುತ್ತದೆ. ನಮ್ಮ ಹಿರಿಯರು ಹೇಳಿದ್ದಾರೆ –

|| ಶಸ್ತ್ತ್ರೇಣ ರಕ್ಷಿತೇ ರಾಷ್ಟ್ರೇ ಶಾಸ್ತ್ರಚಿಂತಾ ಪ್ರವರ್ತತೇ || ಎಂಬುದಾಗಿ.

ಅಂದರೆ ಶಸ್ತ್ರಗಳಿಂದ ರಾಷ್ಟ್ರವನ್ನು ನಾವು ರಕ್ಷಿಸಿದಾಗ ಅಲ್ಲಿ  ವಿದ್ಯೆಗಳು ವಿಕಸನಗೊಳ್ಳುತ್ತವೆ ಎಂದರ್ಥ. ವಿದ್ಯೆಯೇ ತಾನೇ ಮನುಷ್ಯನನ್ನು ಪಾಶವೀಯ ಗುಣಗಳಿಂದ ಮೇಲಕ್ಕೆತ್ತಿ ದೇವತ್ವದೆಡೆಗೆ ಕೊಂಡೊಯ್ಯುತ್ತದೆ ? ವಿದ್ಯೆಯೇ ತಾನೇ ಮನುಷ್ಯಜೀವನದಲ್ಲಿ ಅಮೃತಸಿಂಚನವನ್ನು ಮಾಡುವ ಏಕೈಕ ಸಾಧನ ಅಂತ ನಮ್ಮ ಹಿರಿಯರು ಹೇಳಿದ್ದು –

ವಿದ್ಯಯಾ ವಿಂದತೇಮೃತಮ್” (ವಿದ್ಯೆಯಿಂದ ಅಮೃತತ್ವದ ಪ್ರಾಪ್ತಿಯಾಗುವುದು)

ವಿದ್ಯೆಯೇ ತಾನೇ ಜತ್ತಿನಲ್ಲಿರುವ ಅತ್ಯಂತ ಪರಿಶುದ್ಧವಾದ ನಮ್ಮಿಂದ ಪಡೆಯಬಹುದಾದ ಪರಮ ಸಾಧನ ?

ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ” (ಈ ಜಗತ್ತಿನಲ್ಲಿ ಜ್ಞಾನಕ್ಕೆ ಸಮನಾದ ಪವಿತ್ರವಾದ ಮತ್ತೊಂದು ವಸ್ತುವಿಲ್ಲ)

ಇಂತಹ ಜ್ಞಾನವನ್ನು ಪಡೆದು ಸುಶಿಕ್ಷಿತ ಸಮಾಜವನ್ನು ನಿರ್ಮಿಸಿ ಸಮೃದ್ಧಿಯನ್ನು ಸಾಧಿಸಿ, ಸಹಬಾಳ್ವೆಯನ್ನು ಸೌಹಾರ್ದತೆಯನ್ನು ಮೈಗೂಡಿಸಿಕೊಂಡು ಶಾಂತಿಯಿಂದ ನೆಲೆಸುವಂತಾಗಲು ನಮಗೆ ಶಸ್ತ್ರ, ಶೌರ್ಯ, ಧೈರ್ಯ, ಸಾಹಸ ಎಲ್ಲವೂ ಬೇಕು. ಅದಕ್ಕಾಗಿ ಜೀವತೆತ್ತ ಕದನ ಕಲಿಗಳ ಕಥೆಗಳ ಅರಿವು ಸಾಕಾರವಾಗಬೇಕು. ಆ ನಿಟ್ಟಿನಲ್ಲಿ ನಮ್ಮ ದೇಶದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆ ಮುಂತಾದ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಡೆಸಲಾಗುತ್ತಿರುವ ವಿವಿಧ ಸ್ಪರ್ಧೆಗಳಲ್ಲಿ ಒಂದಾದ ಪ್ರಬಂಧ ಸ್ಪರ್ಧೆಯ “ರಾಣಿ ಲಕ್ಷ್ಮೀ ಬಾಯಿ ನನ್ನ ಕನಸಿನಲ್ಲಿ ಬಂದು ನಾನು ಈ ರೀತಿಯಲ್ಲಿ  ಸೇವೆ ಸಲ್ಲಿಸಬೇಕೆಂದು ಬಯಸುತ್ತಾರೆ” ಎಂಬ ಶೀರ್ಷಿಕೆಯನ್ನು ಆಧರಿಸಿ ಪ್ರಬಂಧವನ್ನು ನಾನು ಬರೆಯುತ್ತಿದ್ದೇನೆ.

ರಾಣಿ ಲಕ್ಷ್ಮೀ ಬಾಯಿ ನನ್ನ ಕನಸಿನಲ್ಲಿ ಬಂದು ನಾನು ಈ ರೀತಿಯಲ್ಲಿ  ಸೇವೆ ಸಲ್ಲಿಸಬೇಕೆಂದು ಬಯಸುತ್ತಾರೆ

ರಾಣಿ ಲಕ್ಷೀ ಬಾಯಿ ವಾರಣಾಸಿಯ ಮೋರೊಪಂತ ತಾಂಬೆ ಎಂಬ ಬ್ರಾಹ್ಮಣನ ಮಗಳಾಗಿ ಜನಿಸಿದಳು.ಅವಳಿಗೆ ಮಣಿಕರ್ಣಿಕಾ ಎಂಬ ಹೆಸರನ್ನು ಇಡಲಾಗಿತ್ತು.   ಅವಳಿಗೆ ನಾಲ್ಕು ವರ್ಷಗಳಾಗಿದ್ದಾಗ ಅವಳ ತಾಯಿ ದೈವಾಧೀನಳಾದಳು. ಆ ಬಳಿಕ ತನ್ನ ಪುಟ್ಟ ಮಗಳನ್ನು ಕರೆದುಕೊಂಡು ತಂದೆ ಮೋರೊಪಂತ ತಾಂಬೆ ಪೇಶ್ವೆಗಳ ನ್ಯಾಯಾಲಯದಲ್ಲಿ ಕೆಲಸಕ್ಕೆ ಸೇರಿಕೊಂಡ. ಬಳಿಕ ಮಗಳಿಗೆ ೧೩ ವರ್ಷವಾದಾಗ ಝಾನ್ಸಿಗೆ ಬಂದು ಅಲ್ಲಿನ ರಾಜನಾದ ಬಾಲಗಂಗಾಧರ ರಾವ್ ನ ಆಸ್ಥಾನದಲ್ಲಿ ಸೇರಿಕೊಂಡ. ಕೆಲವು ಕಾಲದ ಬಳಿಕ ತುಂಬ ಚುರುಕು ಬುದ್ಧಿಯ ಅಪ್ರತಿಮ ಸುಂದರಿಯಾದ ಧೈರ್ಯವಂತೆಯಾದ ಮಣಿಕರ್ಣಿಕಾಳನ್ನು  ರಾಜನಾದ ಬಾಲಗಂಗಾಧರ ರಾವ್ ಸ್ವತಃ ವರಿಸಲು ಬಯಸಿದ. ವಿವಾಹದಲ್ಲಿ ಅವಳಿಗೆ  ಲಕ್ಷ್ಮೀ ಬಾಯಿ  ಎಂದು ಮರುನಾಮಕರಣ ಮಾಡಲಾಯಿತು. ಲಕ್ಷ್ಮೀ ಬಾಯಿ  ತನ್ನ ಸಖಿಯರೊಂದಿಗೆ ಸೇರಿಕೊಂಡು ಕತ್ತಿ ಹಿಡಿದು ಯುದ್ಧ ಕಲೆಗಳನ್ನು ಕರಗತ ಮಾಡಿಕೊಂಡಳು. ಎಂಟು ವರ್ಷಗಳ ಬಳಿಕ ಅವಳಿಗೆ ಇಪ್ಪತ್ತೆರಡು ತುಂಬಿದಾಗ ಒಂದು ಗಂಡು ಮಗುವಿಗೆ ಜನ್ಮವಿತ್ತಳು. ಅದರೆ ಆ ಮಗು ನಾಲ್ಕು ತಿಂಗಳೊಳಗೆ ಕೊನೆಯುಸುರೆಳೆಯಿತು. ಹಾಗಾಗಿ ಮಗುವಿನ ಸಾವಿನಿಂದ ನೊಂದ ರಾಜ ಗಂಗಾಧರ ರಾವ್ ೧೮೫೩ ನೇ ಇಸವಿಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದ.

 ಆಗ ಯುದ್ಧಕಲೆಯನ್ನು ಮೈಗೂಡಿಸಿಕೊಂಡಿದ್ದ ಲಕ್ಷ್ಮೀ ಬಾಯಿ  ಕ್ಷತ್ರಿಯವೃತ್ತಿಯಿಂದ ಝಾನ್ಸಿಯನ್ನು ರಕ್ಷಿಸುವ ಹೊಣೆಯನ್ನು ಹೊತ್ತು ರಾಣಿ ಲಕ್ಷ್ಮೀ ಬಾಯಿ ಯಾಗಿ  ಸಿಂಹಾಸನವನ್ನೇರಿದಳು. ಸಂತತಿಯಿಲ್ಲದ್ದರಿಂದ ದಾಮೋದರ ರಾವ್ ಎಂಬ ಮಗುವನ್ನು ದತ್ತು ಪಡೆದು ತನ್ನ ರಾಜ್ಯದ ಆಡಳಿತವನ್ನು ಮುಂದುವರೆಸಿದಳು. ಆದರೆ ಭಾರತದ ವೈಸರಾಯ್ ಆಗಿದ್ದ ಡಾಲ್ ಹೌಸಿಯ “ದತ್ತು ಮಕ್ಕಳಿಗೆ ಹಕ್ಕಿಲ್ಲವೆಂಬ”  ಕಪಟ ಕಾನೂನಿನಿಂದಾಗಿ ಝಾನ್ಸಿಯನ್ನು ಬ್ರಿಟಿಶರಿಗೆ ಒಪ್ಪಿಸಬೇಕೆಂಬ ಆದೇಶಪತ್ರವನ್ನು ನೋಡಿ ಕೆಂಡಾಮಂಡಲವಾದಳು.  ಝಾನ್ಸಿಯ ಜನತೆ ಯಾವತ್ತಿಗೂ ಪರಕೀಯರ ದಾಸ್ಯಕ್ಕೆ ಒಳಗಾಗಬಾರದು ಎಂಬುದಾಗಿ ದೃಢ ನಿಶ್ಚಯವನ್ನು ಮಾಡಿ ವೈಸರಾಯ್ ನ ಆದೇಶವನ್ನು ಧಿಕ್ಕರಿಸಿದಳು. ಅದಕ್ಕಾಗಿ ಘೋರಯುದ್ಧವನ್ನು ಮಾಡಿ ಪ್ರಾಣತ್ಯಾಗ ಮಾಡಬೇಕಾಗಿ ಬಂದರೂ ಹಿಂಜರಿಯುವುದಿಲ್ಲ ಎಂದು ನಿರ್ಧರಿಸಿದಳು. ಸೈನ್ಯವನ್ನು ಸಂಘಟಿಸಿ ತಾತ್ಯಾಟೋಪೆ ನಾನಾ ಸಾಹೇಬ ಮುಂತಾದ ಕ್ರಾಂತಿಕಾರಿಗಳ ಸಂಪರ್ಕವನ್ನು ಮಾಡಿ ಯುದ್ಧಕ್ಕಾಗಿ ಕುದುರೆಯೇರಿ ಕತ್ತಿ ಹಿಡಿದು ಸ್ವತಃ ರಣಾಂಗಣಕ್ಕಿಳಿದಳು. ಗಂಡಸರಂತೆ ಉಡುಗೆ ತೊಟ್ಟು ೨೨-೨೩ ರ ಕಿರಿ ವಯಸ್ಸಿನಲ್ಲಿ ಒಂದಿಡೀ ಸೈನ್ಯವನ್ನು ಮುನ್ನಡೆಸಿದಳು. ಝಾನ್ಸಿಯ ಕೋಟೆ ಕೈ ಜಾರಿ ಬ್ರಿಟಿಷರ ತೆಕ್ಕೆಗೆ ಸೇರಿದ ಕೂಡಲೇ ಮಾರುವೇಷದಲ್ಲಿ ದತ್ತುಪುತ್ರನನ್ನು ಬೆನ್ನಿಗೆ ಕಟ್ಟಿಕೊಂಡು ೨೦ ಕುದುರೆ ಸವಾರರೊಂದಿಗೆ ಶತ್ರುಗಳ ಎಲ್ಲ ಪಹರೆಯನ್ನೂ ಭೆದಿಸಿಕೊಂಡು ತಪ್ಪಿಸಿಕೊಂಡು ಹೋಗುತ್ತಾ, ಹಿಂದೆ ಬೆನ್ನಟ್ಟಿಕೊಂಡು ಬರುತ್ತಿದ್ದ ಬ್ರಿಟಿಷ್ ಸೈನಿಕರನ್ನು ತನ್ನ ಕತ್ತಿಯಿಂದ ಯಮಪುರಿಗಟ್ಟಿ, ನೂರಿಪ್ಪತ್ತು ಮೈಲಿಗಳ ನಿರಂತರ ಕುದುರೆ ಸವಾರಿಯನ್ನು ಮಾಡಿ ಸುರಕ್ಷಿತ ಜಾಗವನ್ನುತಲುಪಿದಳು.

ಬಳಿಕ ಕ್ರಾಂತಿಕಾರಿಗಳ ರಕ್ಷಣೆಯನ್ನು ಮಾಡದೆ, ಅವರನ್ನು ಬ್ರಿಟಿಷರ ಬಾಯಿಗೆ ದೂಡುವ ಮೋಸದ ಕೆಲಸ ಮಾಡಲೆತ್ನಿಸಿದ ಗ್ವಾಲಿಯರ್ ನ ರಾಜನಾದ  ಜಿಯಾಜಿರಾವ್ ಸಿಂಧಿಯಾನನ್ನು ನಿಗ್ರಹಿಸಿ ಬ್ರಿಟಿಶರೊಂದಿಗೆ ನೇರವಾಗಿ ಕಾದಾಡಿದಳು. ಆದರೆ ಬ್ರಿಟಿಷರ ಜೊತೆ ಕಾದಾಡುವಾಗ ಕೊನೆ ಕ್ಷಣದಲ್ಲಿ ತನ್ನವರೆಲ್ಲ ಧರಾಶಾಯಿಯಾಗಿ ಸುತ್ತಲೂ ಅವಳನ್ನು ಬ್ರಿಟಿಷರು ಸುತ್ತುವರಿಯುತ್ತಿರುವಾಗ ಆತ್ಮರಕ್ಷಣೆಗಾಗಿ ಮಿಂಚಿನ ವೇಗದಲ್ಲಿ ರಣಾಂಗಣದಿಂದ ತಪ್ಪಿಸಿಕೊಂಡು ಹೊರಬಂದರೂ ಮೋಸದಿಂದ ಹಿಂದಿನಿಂದ ಅವಳ ತಲೆಯ ಬಲಭಾಗಕ್ಕೆ ಮತ್ತು ಬಲಭುಜಕ್ಕೆ ಬ್ರಿಟಿಷ್ ಸೈನಿಕರಿಬ್ಬರು ಪ್ರಹಾರವೆಸಗಿದರು. ಅಂತಹ ಸಂದರ್ಭದಲ್ಲಿಯೂ ಆ ಇಬ್ಬರು ಬ್ರಿಟಿಷ್ ಸೈನಿಕರ ತಲೆಯನ್ನು ಕಡಿದು ಮುಂದೆ ಹೋಗಲಾಗದೆ ಕುಸಿದು ಬಿದ್ದಳು. ಅವಳ ಆಪ್ತ ಸೇವಕ ರಕ್ತಸಿಕ್ತಳಾದ ಅವಳನ್ನು ಅಲ್ಲಿಯೇ ಪಕ್ಕದ ಹಳ್ಳಿಯಲ್ಲಿ ಒಂದು ಗುಡಿಸಲಿನಲ್ಲಿ ಮಲಗಿಸಿ ಔಷಧೊಪಚಾರ ಆರಂಭಿಸುತ್ತಿದ್ದಂತೆ ಅವಳು ಕೊನೆಯುಸಿರೆಳೆದಳು. ಬಳಿಕ ಅಲ್ಲಿಯೇ ಅವಳ ಔರ್ಧ್ವದೈಹಿಕ ಸಂಸ್ಕಾರವನ್ನು ಗುಪ್ತವಾಗಿ ನೆರವೇರಿಸಿದ.

೨೩ ವರ್ಷಗಳ ಅತ್ಯಂತ ಸಣ್ಣ ವಯಸ್ಸಿನಲ್ಲಿ ಮಹಿಳೆಯಾಗಿ ಒಂದು ರಾಜ್ಯದ  ರಾಜ್ಯಭಾರವನ್ನು ಹೊತ್ತು, ಸೈನ್ಯವನ್ನು ಸಂಘಟಿಸಿ, ಸಿಂಧಿಯಾರಂತಹ ಮೋಸಗಾರರ ತಂತ್ರವನ್ನು ಭೇದಿಸಿ  ಬ್ರಿಟಿಷರಂಥಹ ಬ್ರಿಟಿಷರ ತೋಪು ತುಪಾಕಿಗಳ ಪ್ರಬಲ ಸೈನ್ಯದೊಂದಿಗೆ ಸ್ವತಃ ರಣಾಂಗಣಕ್ಕಿಳಿದು ವೀರಾವೇಶದಿಂದ ಅನೇಕ ರೀತಿಯ ಹಿನ್ನಡೆಗಳಲ್ಲೂ ಧೃತಿಗೆಡದೆ, ಇತರರಿಗೂ ಧೈರ್ಯ ತುಂಬಿ ಹೋರಾಡಿ ಮಡಿದ ವೀರವನಿತೆ ಯಾರಿಗೆ ತಾನೇ ಮಾದರಿಯಾಗಲಾರಳು ?

ನಮಗೀಗ ಸ್ವಾತಂತ್ರ್ಯ ಲಭಿಸಿದೆ. ಆಡಳಿತವನ್ನು ನಮ್ಮವರೇ ನಡೆಸುತ್ತಿದ್ದಾರೆ. ನಾವು ಶಿಕ್ಷಿತರಾಗುತ್ತಿದ್ದೇವೆ. ಸುರಕ್ಷಿತರಾಗಿದ್ದೇವೆ. ಅತಿವೇಗದ ಅಭಿವೃದ್ಧಿಯನ್ನು ಕಾಣುತ್ತಿದ್ದೇವೆ. ಇನ್ನಿಲ್ಲದ ಸಮೃದ್ಧಿ ಯ ವೈಭವದ ಬದುಕನ್ನು ಕಟ್ಟಿಕೊಳ್ಳಬಹುದಾದ ಎಲ್ಲ ಅವಕಾಶಗಳನ್ನು ಹೊಂದಿದ್ದೇವೆ. ಆದರೆ ನಮ್ಮ ಮುಂದಿನ ಸವಾಲುಗಳ ಸಂಖ್ಯೆ ಸಣ್ಣದೇನಲ್ಲ. 

ನಮಗೆ ದೇಶದ ಒಳಗೆ ಹೊರಗಿರುವಷ್ಟೆ ಶತ್ರುಗಳು ಇದ್ದಾರೆ. ಹೊರಗಿನ ಶತ್ರುಗಳೊಂದಿಗೆ ಹೋರಾಡಲು ನಮ್ಮ ಬಳಿ ಸುದೃಢ ಸೈನ್ಯವಿದೆ. ಒಳಗಿನ ಶತ್ರುಗಳ ಜೊತೆ ಹೋರಾಡಲು ನಮ್ಮ ಬಳಿ ಏನಿದೆ ? ನಮಗೆ ಒಳಗಿನ ಶತ್ರುಗಳು ಯಾರೆಂದು ಗೊತ್ತಿದೆಯೇ ? ನಮ್ಮ ದೇಶದ ಏಳ್ಗೆಯನ್ನು ಸಹಿಸದಿರುವವರು, ನಮ್ಮ ದೇಶವನ್ನು ಸಾವಿರ ಗಾಯಗಳಿಂದ ನರಳುವಂತೆ ಮಾಡುತ್ತೇವೆ ಎಂದು ಪಣತೊಟ್ಟವರು, ಅವರ ಜೊತೆ ಕೈ ಜೋಡಿಸಿ ನಮ್ಮನ್ನು ಕೈಕಟ್ಟಿ ಕುಳಿತುಕೊಳ್ಳುವಂತೆ ಮಾಡುವವರು, ನಮ್ಮಂತಹ ಹೆಣ್ಣು ಮಕ್ಕಳ ಮನಸ್ಸನ್ನು ಕೆಡಿಸಿ,  ವಂಚಿಸಿ, ಬಲೆ ಬೀಸಿ, ಭೋಗಿಸಿ, ಕತ್ತರಿಸಿ ಬಿಸಾಡುವವರು, ನಮ್ಮ ಪೂರ್ವಜರ ಪರಂಪರಾಗತ ಆಸ್ತಿ ಪಾಸ್ತಿಗಳನ್ನು ಮೋಸದಿಂದ ವಶಪಡಿಸಿಕೊಂಡು ನಮ್ಮನ್ನು ನಿರ್ಗತಿಕರನ್ನಾಗಿ ಮಾಡುವವರು,  ನಮ್ಮ ಆಹಾರದಲ್ಲಿ ಸ್ಲೋ ಪಾಯಿಸನ್ ಬೆರೆಸಿ ಮೋಸದಿಂದ ನಮ್ಮನ್ನು ನಿರ್ವೀರ್ಯರನ್ನಾಗಿ ಮಾಡುವವರು, ನಮ್ಮ ಯಾವ ಹಬ್ಬ ಹರಿದಿನಗಳನ್ನೂ ಸಹಿಸದೆ ನಮ್ಮ ಮೇಲೆ ಕಲ್ಲೆಸೆದು ಮಿಥ್ಯಾ ಭ್ರಾತೃತ್ವ ಮೆರೆಯುವವರು, ನಮ್ಮ ದೇಶ, ಸಂಸ್ಕೃತಿ , ಪರಂಪರೆ, ನಾಗರಿಕತೆಗಳ ಬಗ್ಗೆ ಅಭಿಮಾನವಿರದಂತೆ ಮಾಡಿ, ಪರಕೀಯ ರಾಕ್ಷಸೀಪ್ರವೃತ್ತಿಗೆ ಸೌಜನ್ಯದ ಮುಖವಾಡವನ್ನು ತೊಡಿಸಿ ಆದರ್ಶವೆಂದು ಬಿಂಬಿಸಿ ಪಠ್ಯಪುಸ್ತಕಗಳಲ್ಲಿ ತುರುಕಿಸಿ ಮುಗ್ಧ ಮಕ್ಕಳ ಮನಸ್ಸನ್ನು ಕೆಡಿಸುವವರು, ನಮ್ಮವರ ಉದ್ಯೊಗದ ಅವಕಾಶಗಳನ್ನು ಸಂಘಟಿತರಾದ ಪರಕೀಯರ ಪಾಲಿಗೇ ದೊರಕುವಂತೆ ಮಾಡಿ, ಅವರನ್ನು ಕರೆದು ಉಪಚರಿಸಿ, ನಮ್ಮ ಕರದ ನೆರವಿನಲ್ಲಿ ನಮ್ಮನ್ನು ದ್ವೇಷಿಸುವ ವಿದ್ಯೆಯನ್ನು ಕಲಿಸಿ, ಶಸ್ತ್ರ ಕೊಟ್ಟು ನಮ್ಮನ್ನೇ ಗುರಿಯಿಡುವಂತೆ ಮಾಡುವವರು…..ಎಷ್ಟು ಮಂದಿಯಿಲ್ಲ ?

ರಾಣಿ ಲಕ್ಷ್ಮೀ ಬಾಯಿ ನನ್ನ ಒಬ್ಬಳ ಮಾತ್ರವಲ್ಲ ನಮ್ಮೆಲ್ಲ ಭಾರತೀಯರ ಕನಸಿನಲ್ಲಿ ಬರಬೇಕು.  ದುರ್ಗೆಯಾಗಿ ಕಾಳಿಯಾಗಿ ನಮಗೆ ಶಕ್ತಿಯನ್ನು ಅನುಗ್ರಹಿಸಬೇಕು. ನಮಗೆ ಆಕೆಯ ಶಸ್ತ್ರವನ್ನು ಅನುಗ್ರಹಿಸಬೇಕು. ಶಕ್ತಿಯೊಂದಿಗೆ ಹೋರಾಡುವವರನ್ನು ನಿಗ್ರಹಿಸಬೇಕು. ಹೇ ಜಗದಂಬೆ,

ನಾವು  ರಾಣಿ ಲಕ್ಷ್ಮೀ ಬಾಯಿ ಯಂತೆ ಕತ್ತಿಯನ್ನು ಹಿಡಿಯಲು ಕಲಿತಿಲ್ಲ.

ನಾವು  ರಾಣಿ ಲಕ್ಷ್ಮೀ ಬಾಯಿ ಯಂತೆ ಒಳಹೊರಗಿನ ಶತ್ರುಗಳನ್ನು ಗುರುತಿಸಿಲ್ಲ.

ನಾವು  ರಾಣಿ ಲಕ್ಷ್ಮೀ ಬಾಯಿ ಯಂತೆ ಸಬಲೆಯರಾಗಿಲ್ಲ.

ನಮಗೆ ರಾಣಿ ಲಕ್ಷ್ಮೀ ಬಾಯಿ ಯಂತೆ ಸವಾಲುಗಳಿವೆಯೆಂದು ಗೊತ್ತಿಲ್ಲ.

ನಾವು  ರಾಣಿ ಲಕ್ಷ್ಮೀ ಬಾಯಿ ಯಂತೆ ಧೈರ್ಯವಂತರಾಗಿಲ್ಲ.

ನಮಗೆ ರಾಣಿ ಲಕ್ಷ್ಮೀ ಬಾಯಿ ಗೆ ಇದ್ದಂತೆ ನಾನಾ ಜವಾಬ್ದಾರಿಗಳಿವೆ ಎಂಬುದು ಗೊತ್ತಿಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ  ಶಸ್ತ್ತ್ರೇಣ ರಕ್ಷಿತೇ ರಾಷ್ಟ್ರೇ ಶಾಸ್ತ್ರಚಿಂತಾ ಪ್ರವರ್ತತೇ  ಎಂಬುದರ ಅರಿವು ಆಗಿಯೇ ಇಲ್ಲ. ಹಾಗಾಗಿ

 ಹೇ ಭಗವತಿ ಜಗದಂಬೆ, ಸ್ವಾತಂತ್ರ್ಯಕ್ಕಾಗಿ ರಕ್ತ ಚೆಲ್ಲಿದವರ  ಬಲಿದಾನವನ್ನು ವ್ಯರ್ಥವಾಗದಂತೆ ಮಾಡಿ ರಾಣಿ ಲಕ್ಷ್ಮೀ ಬಾಯಿ ಕನಸಿನಲ್ಲಿ ಉಸುರಿದ ಬಯಕೆಯನ್ನು ನಾವು ಸಾಕಾರಗೊಳಿಸುವಂತೆ ಮಾಡು.

ಪ್ರಣಮ್ಯಾ ಕೆ. ೯ ನೇ ತರಗತಿ

ಅಮೃತಭಾರತಿ ವಿದ್ಯಾಲಯ,

ಹೆಬ್ರಿ, ಉಡುಪಿ ಜಿಲ್ಲೆ.

No comments:

Post a Comment