Friday, March 22, 2024

ನನ್ನ ಬದುಕಿನ ಹಾದಿ

 ಮಾತೃದೇವೋ ಭವ

ನನ್ನ ಅಮ್ಮ

ನನ್ನ ಅಮ್ಮ ನನ್ನ ಪಾಲಿನ ದೇವತೆ.  ಪ್ರೀತಿಯೇ ಮೈವೆತ್ತಿರುವ ಮಹಿಳೆ. ಹನ್ನೊಂದು ಹೆತ್ತರೂ ಬತ್ತದ ಬದುಕಿನ ಭರವಸೆಯ ಭಾವ. ಹೆಸರು ಮೀನಾಕ್ಷಿ. 

ಮಕ್ಕಳಿಗಾಗಿ ಎನೇನು ಮಾಡಿಲ್ಲ ? 

ಬೆಳಿಗ್ಗೆ ಉಷಃಕಾಲದಲ್ಲೇ ಎದ್ದು 

"ರಂಗ ನಾಯಕ ರಾಜೀವ ಲೋಚನ

ರಮಣನೇ ಬೆಳಗಾಯಿತೇಳೆನ್ನುತ"

 ಮುಂತಾದ ಭಕ್ತಿಗೀತೆಗಳನ್ನು ಇಂಪಾಗಿ ಹಾಡುತ್ತ ದೇವರಿಗೆ ದೀಪ ಹಚ್ಚಿ ಕೊಟ್ಟಿಗೆಗೆ ಹೋಗಿ ದನಗಳಿಗೆ ಹುಲ್ಲು ಹಾಕಿ  ಹಾಲು ಕರೆದು ಬರುತ್ತಾಳೆ್. ಬೆಳಿಗ್ಗೆ ನಾನು ಅರೆ ನಿದ್ರೆಯಲ್ಲಿ ಅವಳ ಜೊತೆಗೆ ಮಲಗಿದವ ಎಲ್ಲದನ್ನೂ ಕೇಳ್ತಿದ್ದೆ. ಎದ್ದರೆ ಅವಳು ಹಾಡು ಹಾಡುವುದನ್ನು ನಿಲ್ಲಿಸಿಯಾಳೆಂಬ ಭಯ. ಅವಳು ಹಾಡು ಮುಗಿಸಿ ಬೇರೆ ಕಡೆ ತಿರುಗಿದಾಗ  ಅಷ್ಟೇ ಇಂಪಾಗಿ  ಶೀಟಿ ಹೊಡೆದಂತೆ ಹಾಡುವ ಹಕ್ಕಿ. ಅದರ ಇಂಪಾದ ದನಿಯನ್ನು ಬಾಲ್ಯದ ಆ ದಿನಗಳಲ್ಲಿ ಯಾವಾಗಲೂ ಸವಿಯುವ ಅದೃಷ್ಟ ನನ್ನದಾಗಿತ್ತು.

ಒಲೆಗೆ ಬೆಂಕಿ ಹಾಕಿ ಒಂದು ಕಪ್ಪಾದ ಚರಿಗೆಯಲ್ಲಿ ಕಾಫಿ ಗೆ ನೀರು ಇಟ್ಟು ಬೆಲ್ಲ ಕಾಫಿ ಪುಡಿ ಹಾಕಿ ಹೋದರೆ ಹಾಲು ಕರೆದು ಬರುವಾಗ ಅದು ಕುದಿಯುತ್ತಿರುತ್ತದೆ ಅದಕ್ಕೆ ನಾಲ್ಕು ಲೊಟ ಹಾಲು ಹಾಕಿದರೆ ಮನೆಯ ಎಲ್ಲರಿಗೂ ಆಗುವಷ್ಟು ಕಾಫಿ ರೆಡಿ. ಜೊತೆಗೆ ಕಾಫಿಯ ಪಾತ್ರೆ ಯನ್ನು ಒಲೆಯಿಂದ ಕೆಳಗೆ ಇಳಿಸಿದ ಕೂಡಲೇ ದೋಸೆಯ ಕಾವಲಿ ಅದರ ಜಾಗವನ್ನು ಪಡೆಯುತ್ತಿತ್ತು. ದೂರದ ಶಾಲೆಗೆ ಹೋಗುವ ಅಣ್ಣ ಅಕ್ಕಂದಿರಿಗೆ ಕೂಡಲೇ ತಿಂಡಿ ಆಗಬೇಕು. ನಮ್ಮ ಮನೆಯ ಪಡಸಾಲೆಗೆ ಹೊಂದಿಕೊಂಡಂತೆ ಇದ್ದ ಇಲ್ಲ್ (ಅಡಿಗೆಮನೆ)ನಲ್ಲಿ ಎಲ್ಲರೂ ಸಾಲಾಗಿ ತಿಂಡಿಗಾಗಿ ಕುಳಿತಿರುತ್ತಿದ್ದೆವು. ಅಮ್ಮ ದೋಸೆಯನ್ನು ಬೇಗ ಬೇಗ ಮಾಡಿ ಹಾಕಿದರೂ ಶಾಲೆಗೆ ಹೋಗುವ ತರಾತುರಿಯಲ್ಲಿರುವ ಅಣ್ಣಂದಿರಿಗೆ ದೋಸೆ ಹಾಕಬೇಕು. ಹಾಗೆ ನನ್ನಂತ ಸಣ್ಣ ಮಕ್ಕಳನ್ನು ಸಂಭಾಳಿಸಬೇಕು. ನಮಗೆ ದೋಸೆ ಹಾಕದಿದ್ದರೆ ನಾವು ಅಳುತ್ತೇವೆ, ಅಥವಾ ಕಿರಿಚುತ್ತೇವೆ. ಅಣ್ಣಂದಿರು ಅವರವರ ಶಾಲೆಗೆ ಹೊರಡಬೇಕಾಗುವುದರಿಂದ ತಿಂಡಿಗಾಗಿ  ಅವಸರಪಡಿಸುತ್ತಾರೆ. ಒಟ್ಟಾರೆ ಎಲ್ಲರಿಗೂ ಏಕಕಾಲದಲ್ಲಿ ದೋಸೆ ಬೇಕು.  ಅಮ್ಮ ಅದನ್ನು ಪ್ರತಿದಿನ ಹೇಗೆ ನಿಭಾಯಿಸಿರಬಹುದು ? ಈಗ ೪೫ ವರ್ಷಗಳ ನಂತರ ಯೋಚಿಸಿದರೆ ಅಮ್ಮನ ತಾಳ್ಮೆಯ ಎಷ್ಟಿತ್ತೆಂದು ಗೊತ್ತಾಗುತ್ತದೆ. ಈಗ ಒಂದೆರಡು ಮಕ್ಕಳನ್ನು ಶಾಲೆಗೆ ಹೊರಡಿಸುವಾಗಲೇ ತಾಯಿಯಂದಿರಿಗೆ ಸುಸ್ತಾಗಿರುತ್ತದೆ.(ತಾಯಿಯಂದಿರು ಈಗಲೂ ಒಂದೆರಡು ಮಕ್ಕಳಿಗಾಗಿ ಮಾಡುವ ಇಂತಹ ಕೆಲಸ ಸ್ತುತ್ಯರ್ಹ ಎನ್ನುವುದರಲ್ಲಿ ಎರಡು ಮಾತಿಲ್ಲ)

ಅಮ್ಮನಿಗೆ ಓದಲು ಬರೆಯಲು ಬರುವುದಿಲ್ಲ. ಆದರೆ ಅವಳಿಗೆ ಶಿಕ್ಷಿತರಿಗಿಂತ ಎಷ್ಟೊ ಹೆಚ್ಚು ಭಜನೆಗಳು ಶೋಭಾನೆ ಹಾಡುಗಳು ಗೊತ್ತಿದ್ದವು. ಯಾವ ಶಿಕ್ಷಿತರಿಗೂ ಗೊತ್ತಿರುವುದಕ್ಕಿಂತ ಹೆಚ್ಚು ಪೌರಾಣಿಕ ಕಥೆಗಳು ಅಮ್ಮನಿಗೆ ಗೊತ್ತಿದ್ದವು.

 ಅಪ್ಪ ಮತ್ತು ಹಿರಿಯ ಅಣ್ಣಂದಿರು ಅಗಾಗ ಯಕ್ಷಗಾನದ ಆಟಕ್ಕೆ ಹೋಗಿ ಬರುತ್ತಿದ್ದರು. ಆಗಿನ ಕಾಲದಲ್ಲಿ ಹೆಬ್ರಿಯಲ್ಲಿ ಪ್ರತಿದಿನ ಒಂದಲ್ಲ ಒಂದು ಮೇಳದ ಆಟ ಇರುತ್ತಿತ್ತು. ಸಾಮಾನ್ಯವಾಗಿ ಸಾಲಿಗ್ರಾಮ ಮೇಳ ಮತ್ತು ಪೆರ್ಡೂರು ಮೇಳ ಪ್ರಸಿದ್ಧ. ಹೆಚ್ಚಾಗಿ ಪೌರಾಣಿಕ ಪ್ರಸಂಗಗಳೇ ಹೆಚ್ಚು. ಅಲ್ಲಲ್ಲಿ ದೇವಸ್ಥಾನಗಳಲ್ಲಿ ಬಯಲಾಟಗಳೂ ಇರುತ್ತಿದ್ದವು. ಇನ್ನು ಕೆಲವು ಕಡೆ ಕಟೀಲು ಮೇಳದ, ಧರ್ಮಸ್ಥಳ ಮೇಳದ ಅಥವಾ ಮಂದರ್ತಿ ಮೇಳದ ದೇವಿಮಹಾತ್ಮೆ ಮೊದಲಾದ ಪ್ರಸಂಗಗಳಿರುತ್ತಿದ್ದವು. ಇದನ್ನು ನೋಡಲು ಹೆಬ್ರಿಯ ತನಕ ನಡೆದುಕೊಂಡೇ ಹೋಗಬೇಕು. ದೂರ ಕೇವಲ ೧೨ ಕಿ.ಮೀ. ಸಂಜೆ ಹೊರಟರೆ ಬೆಳಿಗ್ಗೆ ಏಳು ಗಂಟೆಗೆ ವಾಪಾಸು ಬರುತ್ತಿದ್ದರು. ರಾತ್ರಿ ೯.೩೦ ರಿಂದ ಬೆಳಿಗ್ಗೆ ೫/೬ ಗಂಟೆಯ ತನಕ ಆಟ ನಡೆಯುತ್ತಿತ್ತು. ಅಣ್ಣಂದಿರು ಅಥವಾ ಅಪ್ಪ ಆಟ ನೋಡಿ ಬಂದವರು ಪೂರ್ಣ ಕಥೆಯನ್ನು ತಿಂಡಿ ತಿನ್ನುವಾಗ ಹೇಳಿ ಮುಗಿಸುತ್ತಿದ್ದರು. ಅಮ್ಮ ಅದೆಲ್ಲವನ್ನೂ ನೆನಪಿಟ್ಟುಕೊಂಡಿರುತ್ತಿದ್ದಳು.

ನಾನು ೪ ನೇ ತರಗತಿಯಲ್ಲಿ(೧೯೮೬) ಇದ್ದಾಗ ಮೊದಲ ಬಾರಿ ೯ ಕಿ.ಮೀ. ದೂರದ ಕಾಡಿನ ದಾರಿಯ  ಮುನಿಯಾಲಿಗೆ ಗೆಳೆಯರ ಜೊತೆಗೆ ಆಟ ನೋಡಲಿಕ್ಕೆ ಹೋಗಿದ್ದೆ. ಆಗ ನೆಲ ಟಿಕೆಟು ರೂ. ಎರಡು ಇತ್ತು.  ಆಟದ ಷ್ಟೇಜಿನ ಪಕ್ಕೆಲಗಳಲ್ಲಿ ನೆಲದ ಮೇಲೆ ಕುಂಟಲ್ದ ಸೊಪ್ಪುಗಳನ್ನು ಕಡಿದು ಹರಡಿ ಹಾಕಿರುತ್ತಿದ್ದರು. ಅದರಲ್ಲೇ ಕುಳಿತುಕೊಳ್ಳಬೇಕು. ಎಲ್ಲರೂ ಹೊದೆಯಲಿಕ್ಕೆ ಎನಾದರೂ ತಂದುಕೊಳ್ಳುತ್ತಿದ್ದರು. ಸೊಪ್ಪು ಮೊದಲೇ ತಂಡಿಯಾಗಿರುತ್ತದೆ. ರಾತ್ರಿಯ ಹೊತ್ತು ಸಮಯ ಕಳೆದಂತೆ ತಂಡಿ ಹೆಚ್ಚಾಗುತ್ತಾ ಹೊಗುತ್ತದೆ. ಮಧ್ಯರಾತ್ರಿಯ ಹೊತ್ತಿಗೆ ನಮಗೆಲ್ಲ ನಿದ್ರೆಯೋ ನಿದ್ರೆ, ನಡು ನಡುವೆ ಚಂಡೆಯ ಶಬ್ದಕ್ಕೆ ಎಚ್ಚರವಾದರೂ ಕಣ್ಣು ಬಿಡಲಾಗುವುದಿಲ್ಲ. ಹಸಿಸೊಪ್ಪಿನ ಹಾಸಿಗೆಯ ಜೊತೆಗೆ ಚಳಿ ಬೇರೆ ನಮ್ಮನ್ನು ಬಹಳ ಪೀಡಿಸುತ್ತಿತ್ತು.  ಆದರೂ ಆಟದ ಚಟ ಬಿಡಬೇಕಲ್ಲ ? ತ್ಕುೋಮಟ ಗೋವಿಂದ ನಾಯಕರ ಹನುಮಂತನ ಪಾತ್ರ ಆ ದಿನಗಳಲ್ಲಿ ಹೆಸರುವಾಸಿಯಾಗಿತ್ತು. ನಾನು ನಿಜವಾಗಲೂ ಅದನ್ನು ನೋಡಿ ಬೆರಗಾದೆ, ಸಂತೋಷಪಟ್ಟೆ.

ಅಮ್ಮ ನನ್ನನ್ನು ಯಾವಗಲೂ ಎಲ್ಲೇ ಹೋದರೂ ಜೊತೆಗೆ ಕರೆದುಕೊಂಡು ಹೋಗುತ್ತಿದ್ದಳು. ಅಥವಾ ನಾನೇ ಅವಳ ಸೆರಗು ಹಿಡಿದು ಓಡುತ್ತಿದ್ದೆ. ಮಧ್ಯಾಹ್ನ ಊಟ ಮಾಡಿದ ಬಳಿಕ ಮೊದಲಿಗೆ ಕೊಳಜ್ಜಿ ಗುಡ್ಡೆಗೆ ಹೋಗಿ ಗೇರು ಬೀಜ ಹೆಕ್ಕಿಕೊಂಡು ಬರ್ಬೇಕು. ಇಲ್ಲದಿದ್ದರೆ ಅದು ಪಕ್ಕದ ಮನೆಯ ಹೆಂಗಸ ಪಾಲಾಗುತ್ತಿತ್ತು. ಬಹಳ ಬಾರಿ ಹೊದಾಗ ಗೇರುಬೀಜ  ಇರ್ತಾನೇ ಇರಲಿಲ್ಲ. ಮೊದಲೇ ಆ ಹೆಂಗಸು ಹೆಕ್ಕಿಕೊಂಡು ಹೋಗಿರುತ್ತಿತ್ತು. ಕಾಲಿ ಹಣ್ಣು(ಬೀಜ ಬೇರ್ಪಡಿಸಿದ್ದು) ಸಾಕ್ಷಿಗೆ ಇರುತ್ತಿತ್ತು. ಆಗ ನಾನು ಅಮ್ಮನನ್ನು ಕೇಳುತ್ತಿದ್ದೆ - "ಯಾಕೆ ಆ ಹೆಂಗಸಿಗೆ ಸೇರಿದ್ದಲ್ಲದಿದ್ದರೂ ನಮಗೆ ಸೇರಿದ ಜಾಗದ ಗೇರು ಬೀಜ ಹೆಕ್ಕಿಕೊಂಡು ಹೋಗುತ್ತದೆ ?" 

ಆಗ ಅವಳು ಆ ಹೆಂಗಸಿನ ಪುರಾಣ ಎಲ್ಲ ಹೇಳುತ್ತಿದ್ದಳು.

"ಸುಮಾರು ೧೬/೧೭ ವರ್ಷಗಳ ಹಿಂದಿನ ತನಕ  ನನ್ನ ಮನೆ ಏಗಿರುವಲ್ಲಿ ಇರಲಿಲ್ಲ. ನಾವು ಹಿಸೆ ಮಾಡಿಕೊಂಡ ಮೇಲೆ ಇಲ್ಲೇ ಕೆಳಗಿನ ಬೆಟ್ಟುಗದ್ದೆಯಲ್ಲಿ ಮುಳಿಮಾಡಿನ ಮನೆಯಲ್ಲಿ ವಾಸ ಮಾಡಿದ್ದೆವು. ಒಂದು ಬಾರಿ ೧೭ ವರ್ಷಗಳ ಹಿಂದೆ ಆ ಮನೆಗೆ ಬೆಂಕಿ ಬಿತ್ತು. ನಮ್ಮ ವರ್ಷದ ಬೆಳೆ ಸುಮಾರು ೫/೬ ಕ್ವಿಂಟಲ್ ಅಕ್ಕಿ ಅಲ್ಲಿಂದ ಹೇಗೇಗೋ ಸಾಗಿಸಿ ಆ ಹೆಂಗಸಿನ ಮನೆಯ ಉಪ್ಪರಿಗೆಯಲ್ಲಿ ಅಪ್ಪ ಇಡಿಸಿದರು. ಆದರೆ ಮೂರ್ನಾಲ್ಕು ತಿಂಗಳು ಕಳೆದು ಅಲ್ಲಿಗೆ ಹೋದಾಗ ೧ ಕ್ವಿಂಟಲ್ ಅಕ್ಕಿ ಕೂಡ ಅಲ್ಲಿ ಇರಲಿಲ್ಲ. ಆ ಹೆಂಗಸನ್ನು ಕೇಳಿದರೆ "ನೀವೇ ತಾನೆ ಅಲ್ಲಿ ಇಟ್ಟಿರೋದು. ನಾನು ಯಾವತ್ತೂ ಉಪ್ಪರಿಗೆಗೆ ಹೋದದ್ದೇ ಇಲ್ಲ. ನೀವಿಟ್ಟಿದ್ದನ್ನು ನೀವೇ ಈಗ ನೋಡುತ್ತಿದ್ದೀರಿ. ನಿಮ್ಮದು ನಿಮಗೆ. ನಮ್ಮದು ನಮಗೆ. ಉಳಿದದ್ದೇನೂ ನನಗೆ  ಗೊತ್ತಿಲ್ಲ." ಅಂದುಬಿಟ್ಟಳು.

 ಎಂಥಾ ಮೋಸ !!!. ಆ ರೀತಿ ಮೋಸ ಮಾಡಿದ ಹೆಂಗಸು ಹೇಗೆ ತಾನೇ ಗೇರು ಬೀಜ ಮುಟ್ಟದಿರಲು ಸಾಧ್ಯ. ಆದರೆ ನಮ್ಮಮ್ಮನಿಗೆ ಏನೋ ಸ್ವಲ್ಪ ಆದರೂ ಕಳ್ಳರಿಂದ ಉಳಿಸಿಕೊಳ್ಳಬೇಕೆಂಬ ಹಪಹಪಿ.

ಅವಳ ಜೊತೆ ಹೋದಾಗ ಗೇರುಹಣ್ಣು ನನಗೆ. ಬೀಜ ಅವಳ ಬುಟ್ಟಿಗೆ. ಹಣ್ಣಿನ ರಸ ಮುಕ್ಕಾಲುಭಾಗ ಹೊಟ್ಟೆಯೊಳಗಾದರೆ ಕಾಲುಭಾಗ ಹೊಟ್ಟೆಯ ಹೊರಭಾಗಕ್ಕೆ !!!  ಆಮೇಲೆ ಮನೆಗೆ ಬಂದ ಮೇಲೆ ಅಮ್ಮ ನನಗೆ ಸ್ನಾನ ಮಾಡಿಸುತ್ತಿದ್ದಳು.

ಅವಳು ಅಪ್ಪನಂತೆ ಆಗಾಗ ಸಂಪಿಗೆಯ ದೊಡ್ಡಪ್ಪನ ಮನೆಗೆ ಹೊಗುತ್ತಿದ್ದಳು. ಹೋದರೆ ರಾತ್ರಿ ಅಲ್ಲಿ ಹಾಲ್ಟ್ ಅಂತಾನೇ ಅರ್ಥ. ಅಲ್ಲಿಯ  ದೊಡ್ಡಮ್ಮನೂ ಮೀನಾಕ್ಷಿಯೇ. ಇಬ್ಬರು ಮೀನಾಕ್ಷಿಯರು ಪೂರ್ತಿ ಸಮಾಧಾನ ಆಗುವಷ್ಟು  ಹಗಲುರಾತ್ರಿ ಒಂದು ಮಾಡಿ ಮಾತಾಡಿ ಮಲಗುತ್ತಿದ್ದರು. ನಾನು ರಾತ್ರಿ ಬೇಗ ಮಲಗಿ ಬಿಡುತ್ತಿದ್ದೆ. ದೊಡ್ಡಮ್ಮನಿಗೂ ಬರೊಬ್ಬರಿ ಹತ್ತು ಮಕ್ಕಳು. ಆದರೆ ನಾನು ಹೋಗುವ ವೇಳೆ ಅವರ ಕೊನೆಯ ಮಗಳು ಸುಮ ಮದುವೆ ವಯಸ್ಸಿಗೆ ಬಂದ ಕನ್ಯೆ ಆಗಿದ್ದಳು. ಕೊನೆಯ ಮಗ ಕುಮಾರಣ್ಣ ಡಿಗ್ರೀ ಓದುತ್ತಿದ್ದರು. ಮೋಹನ ಅಣ್ಣ ಆಗ ಓರಿಯಂಟಲ್ ಇನ್ಸೂರೆನ್ಸ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದರು. ಚಂದ್ರಶೇಖರ ಅಣ್ಣ ಡಿಗ್ರೀ ಮುಗಿಸಿ ಮನೆಯ ಜಮೀನಿನ ಉಸ್ತುವಾರಿ ವಹಿಸಿಕೊಂಡಿದ್ದರು. ಜಗ್ಗಣ್ಣ ಪಿ.ಡಬ್ಲ್ಯೂ.ಡಿ ಯಲ್ಲಿ ಕೆಲಸದಲ್ಲಿದ್ದರು. ಗೋವಿಂದಣ್ಣ ನೆಲ್ಲಿಬೆಟ್ಟ್ ನಲ್ಲಿ ಜಮೀನನ್ನು ನೋಡಿಕೊಳ್ಳುತ್ತಿದ್ದರು. ಹಿರಿಯರಾದ ರಾಮಣ್ಣನ ಮುಖನೋಡಿದ ನೆನಪೂ ಕೂಡ ನನಗೆ ಇಲ್ಲ. ಅವರು ಬೆಂಗಳೂರಿನಲ್ಲಿ ನಾನು ಹುಟ್ಟುವ ಮೊದಲೇ ಸೆಟ್ಲಾಗಿದ್ದರು.

ಬೆಳಿಗ್ಗೆ ಸಂಪಿಗೆಯಲ್ಲಿ ತಿಂಡಿಯದ್ದೇ ಸೊಗಸು. ಯಾಕೆಂದರೆ ದೊಡ್ಡಮ್ಮ ಯಾರೆ ಒಳಗಿನ  ಕೆಲಸಕ್ಕೆ ಇದ್ದರೂ ಹಾಲು ಮೊಸರು ಬೆಣ್ಣೆ ತುಪ್ಪದ ಕೆಲಸ ಖುದ್ದಾಗಿ ತಾವೇ ಮಾಡುತ್ತಿದ್ದರು. ದೊಡ್ಡದಾದ ಕಲಾಯಿ ಹಾಕಿದ ಹಿತ್ತಾಳೆಯ ಚರಿಗೆಯಲ್ಲಿ ಬೆಳಿಗ್ಗೆ ಕಡಗೋಲಿಗೆ ಆರುಸುತ್ತು ಹಗ್ಗ ಸುತ್ತಿ ಒಂದು ಸ್ಟೂಲ್ ನಲ್ಲಿ ಕೂತು ಮಜ್ಜಿಗೆ ಕಡೆದರೆ ಪುಷ್ಕಳವಾಗಿ ಬರುವ ತಾಜಾ ಬೆಣ್ಣೆ(ಸಂಸ್ಕೃತದಲ್ಲಿ ಹೈಯಂಗವೀನ ಅಂತಾರೆ)ಯಲ್ಲಿ ಒಂದು ದೊಡ್ಡ ಬೆಣ್ಣೆಮುದ್ದೆಯನ್ನು ತಿಂಡಿ ತುನ್ನುತ್ತಿದ್ದ ನನ್ನ ಬಾಳೆಲೆಗೆ ಹಾಕುತ್ತಿದ್ದರು. ನನಗೆ ಸ್ವರ್ಗವೇ ಅದು ಎಂಬಂತೆ ಅನುಭವ.  

ಆಗ ಅವರ ಮನೆಯಲ್ಲಿ ಡೇರಿಗೆ ಹಾಲು ಹಾಕುತ್ತಿರಲಿಲ್ಲ. ನಮ್ಮ ಮನೆಯ ಹತ್ತಿರದಲ್ಲೇ ಹೊಸದಾಗಿ ಡೇರಿ ಆಗಿದ್ದರಿಂದ ಹಾಲು ಮಜ್ಜಿಗೆಗೆ ಕೊರತೆ ಇಲ್ಲದಿದ್ದರೂ ಪುಷ್ಕಳವಾಗಿರುತ್ತಿರಲಿಲ್ಲ. ಯಾಕೆಂದರೆ ಡೇರಿಗೆ ಹಾಲು ಹಾಕದಿದ್ದರೆ ಮುಂದೆ ಅದು ಮುಚ್ಚಿ ಹೋಗುತ್ತದೆ ಎಂಬ ಭಯ ಹತ್ತಿರದವರೆಲ್ಲರಿಗೂ. 

No comments:

Post a Comment